ದೇಶ

ವಿಡಿಯೋ: ಗಾಂಧಿ ಜಯಂತಿ ವೇದಿಕೆಯಲ್ಲೇ ಕಿತ್ತಾಡಿದ ಕಿರಣ್ ಬೇಡಿ-ಎಐಎಡಿಎಂಕೆ ಶಾಸಕ

Lingaraj Badiger
ಪುದುಚೆರಿ: ಶಾಸಕರ ಭಾಷಣದ ಅವಧಿಗೆ ಸಂಬಂಧಿಸಿದಂತೆ ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಾಗೂ ಎಐಎಡಿಎಂಕೆ ಶಾಸಕ ಎ. ಅಣ್ಬಳಗನ್ ಅವರು ಗಾಂಧಿ ಜಯಂತಿ ವೇದಿಕೆಯಲ್ಲೇ ಕಿತ್ತಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.
ಇಂದು ಪುದುಚೆರಿಯ ಉಪ್ಪಾಳಂನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ, ಸಚಿವರು ಸಹ ಭಾಷಣ ಮೊಟಕುಗೊಳಿಸುವಂತೆ ಶಾಸಕನಿಗೆ ಸೂಚಿಸಿದರೂ ಭಾಷಣ ಮುಂದುವರೆಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಿರಣ್ ಬೇಡಿ ಅವರು ಮೈಕ್ ಆಫ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ಕೋಪಗೊಂಡ ಶಾಸಕ ಅಣ್ಬಳಗನ್ ಅವರು, ಕಿರಣ್ ಬೇಡಿ ಅವರ ವಿರುದ್ಧ ಏರುಧ್ವನಿಯಲ್ಲಿ ಮಾತನಾಡತೊಡಗಿದರು.
ವಿಡಿಯೋದಲ್ಲಿ ಕಿರಣ್ ಬೇಡಿ ಅವರು ಭಾಷಣ ಮುಗಿಸಿ ಹೋಗಿ ಕುಳಿತುಕೊಳ್ಳುವಂತೆ ಶಾಸಕನಿಗೆ ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ. ಆದರೆ ಅವರೊಂದಿಗೆ ಜಗಳ ತೆಗೆದ ಶಾಸಕ ನೀವೇ ವೇದಿಕೆಯಿಂದ ಹೋಗಿ ಎಂದು ದಬಾಯಿಸುತ್ತಿದ್ದಾರೆ.
ಕಿರಣ್ ಬೇಡಿ ಅವರ ವಿರುದ್ಧ ಅಣ್ಬಳಗನ್ ಟೀಕೆ ನಡೆಸುತ್ತಿರುವುದು ಇದು ಮೊದಲೇನಲ್ಲ. ಈ ವರ್ಷದ ಮಾರ್ಚ್‌ನಲ್ಲಿ ಪುದುಚೆರಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಅವರು, ಬೇಡಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
SCROLL FOR NEXT